ॐ
ಅಣು ಮಹತ್ತಾದ ದೇವ ||ಪ||
ಅಣುವಿಂಗೆ ಅಣುವು ಮಹತಿಂಗೆ ಮಹಿಮನು ಅಖಿಳ
ಗುಣಭರಿತ ಪರಮ ಪಾವನ ಚರಿತ ಎನ್ನ ನಿರ-
ಯಣ ಸಮಯದಲ್ಲಿ ಶ್ರೀಹರಿ ಹರಿಯೆ ಎಂದೆಂಬ
ನೆನಹನೊಲಿದಿತ್ತು ಸಲಹಯ್ಯ ||ಅ||
ನೋಡಿ ನಡೆಯದೆ ಹಿಂದನೇಕ ಜನ್ಮಗಳಲ್ಲಿ
ಮಾಡಿರುವ ಪಾತಕವು ವ್ಯಾಧಿರೂಪಗಳಿಂದ
ಪೀಡಿಸುತ ತನುವ ತೊತ್ತಳ ತುಳಿದು ನೆಲಕಿಕ್ಕಿ
ತೀಡಿ ಬಸವಳಿದ ಬಳಿಕ
ನಾಡಿಗಳು ಸ್ವಸ್ಥಾನದಾಸ್ಥಾನ ಛೇದಿಸಲು
ಓಡಿ ಕಂಠೋಪದಲಿ ಪ್ರಾಣ ನಿಲ್ಲದಲೆ ಒ
ದ್ದಾಡುತಿಹ ಸಮಯದಲಿ ನಾಲಗೆ ಹರಿ ನಾಮವ
ಪಾಡಿ ಪೊಗಳುವುದ ಕರುಣಿಸಯ್ಯ. ||1||
ಕಂದ ಬಾರೆಂತೆಂದು ಶೋಕಿಪ ಜನನಿ ಜನಕ
ನಿಂದಳುತ ಜೇಷ್ಠರು ಕನಿಷ್ಠ ಭ್ರಾತೃ ಪುತ್ರ
ಬಂಧು ಮಿತ್ರರು ಬಹು ಪ್ರಳಾಪಮಂ ಗೈವ ಸತಿ
ಅಂದವಾಗಿಹ ಮಂದಿರ
ಹೊಂದಿಪ್ಪ ಸಂಪತ್ತು ನೋಡಿ ಹಂಬಲಿಸುತಲಿ
ವೃಂದಾವನ ಪ್ರಿಯನೆ ನಿನ್ನ ಮರೆತಿದ್ದೆ ಗೋ
ವಿಂದ ವೈಕುಂಠ ವಿಭುವೇ ಎಂದು ತಾರಿಸಿ ಮು
ಕುಂದ ಮುಕುತಿಯನೊದಗಿಸಯ್ಯ ||2||
ಘಾತೀತಿಯನು ಹಿಡಿದು ಹೆಡಗಟ್ಟಿ ಪಂಚ ಮಹಾ
ಪಾತಕನ ತೊಗಲ ಸುಲಿದೆದೆಯ ಸೀಳೆಂಬ ಯಮ
ದೂತರುದ್ಧತ ಕಣ್ಗಳನು ಕಂಡು ಮನದಲಿ
ಭೀತಿಯಿಂ ನಡುನಡುಗಿ ಬಳಲಿ
ಚೇತನವು ಕುಂದಿ ನಾಲಗೆ ಬೀಳ್ವ ಸಮಯದಲಿ
ಯಾತರಾಸೆಯು ಬಾರದಂತಾದಿಕೇಶವ
ಅನಾಥ ಬಂಧುವೆ ಅಚ್ಯುತ ಮುರಾರಿ ಹರಿಯೆಂಬ
ಮಾತನಾಡಿಸಿ ಮುಕುತಿಯೊದಗಿಸಯ್ಯ ||3||
Thoughts & Reflections
0No reflections shared yet. Be the first to share your thoughts!