← Back to home
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ
Author: ಕನಕದಾಸCategory: ವೈರಾಗ್ಯRaaga: ಕಾಂಬೋಧಿTaala: ಝಂಪೆತಾಳ
ॐ
ಈ ಸಿರಿಯ ನಂಬಿ ಹಿಗ್ಗಲು ಬೇಡ ಮನವೆ ||ಪ||
ವಾಸುದೇವನ ಭಜಿಸೊ ಒರಟು ಜೀವನವೆ ||ಅ||
ನೆಂಟರೂರಿಗೆ ಹೋಗಿ ನಾಲ್ಕು ದಿವಸವಿದ್ದರೆ
ಎಂಟು ದಿನದಾಯಾಸ ಅಟ್ಟಬಹುದೊ
ಉಂಟು ಸೌಭಾಗ್ಯವೆಂಬ ಧೈರ್ಯವ ಬಿಟ್ಟು ವೈ
ಕುಂಠವಾಸಿಯ ಭಜಿಸೊ ತುಂಟ ಜೀವನವೆ ||1||
ಮಡದಿ ಮಕ್ಕಳು ಎಂಬ ಮಾಯಾ ಸಂಸಾರಕ್ಕೆ
ಸಡಗರವಗೊಂಡು ಬರಿದೆ ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಬಹರೆ ಭಂಡ ಜೀವನವೆ ||2||
ಇಷ್ಟ ಸಂಪತ್ತನ್ನು ಬಡವರಾ ಕರೆತಂದು
ಕೊಟ್ಟು ಮಾಡಿದ ಪುಣ್ಯಫಲ ತನ್ನದೊ
ಸೃಷ್ಟಿಯೊಳು ಕಾಗಿನೆಲೆಯಾದಿಕೇಶವನಂಘ್ರಿ
ಮುಟ್ಟಿ ಮನದಲಿ ಭಜಿಸೊ ಭ್ರಷ್ಟಜೀವನವೆ ||3||
Thoughts & Reflections
0No reflections shared yet. Be the first to share your thoughts!