ॐ
ನಾರಾಯಣನೆ ಈತ- ನಾರಿ ಒಳ್ಳೆಯ
ವರಿಗೆ ಮಾಡ್ದ ವಿಘಾತ ||ಪ||
ಪರಪರಿಯಲಿ ಪೊಗಳುವ ಗೀತ- ನಾನೆಂದ
ವರ ಮುರಿದ ಪ್ರಖ್ಯಾತ ||ಅ||
ಕೈಕಾಲಿಲ್ಲದೆ ಆಡ್ದಾ
ಮೈಮೇಲ್ಭಾರವ ಪೊತ್ತು ನೋಡ್ದಾ
ಕೋರೆಯಲಿ ತಿವಿದು ಹತ ಮಾಡ್ದಾ
ತಾಕೊ ಎಂದು ಒದರಿ ಬಗೆದು ಬೀರ್ದಾ
ಅರ್ತಿಯಿಂದ ಪಾತಾಳಕೆ ದೂಡ್ದಾ
ಮುನಿಯ ಮಗನಾಗಿ ಕ್ಷತ್ರಿಯರ ಕಾಡ್ದಾ
ರಾವಣಗಾಗಿ ಅಂಬುತೆಗೆದು ಹೂಡ್ದಾ
ಆ ಜಮುನೆ ಪೊಕ್ಕು ಮೋಜು ಮಾಡ್ದಾ
ದಿಗಂಬರ ವೇಷವ ತಾಳ್ದಾ
ದಿಗಿದಿಗಿ ಎಂದು ಅಶ್ವವೇರ್ದಾ ||1||
ಕಳ್ಳಗಿಂತ ಮಹಾಕಳ್ಳ
ಕಲ್ಲನು ಮರೆ ಮಾಡಿಕೊಂಡಿಹನಲ್ಲ
ಭೂಮಿ ನೆಗಹುದ ಬಲ್ಲ
ಪುಟ್ಟಿ ಮಗು ಪ್ರಹ್ಲಾದಗೊಲಿದನಲ್ಲ
ಎರಡು ಪಾದ ಭೂಮಿ ತಾನೊಲ್ಲ
ಇವನ ಕೊಡಲಿಬಾಯಿಗಿದಿರಿಲ್ಲ
ಕೋ ಎಂದ ಲಂಕೆಗೆ ಬೆಂಕಿ ಮಲ್ಲ
ಕೊಂಕಲಿ ಕೊಳಲನೂದಿ ಗೊಲ್ಲ
ಮೈಮೇಲೆ ಗೇಣರಿವೆಯಿಲ್ಲ
ಇವ ಮೇಲಾದ ತೇಜಿಯನೇರಬಲ್ಲ ||2||
ಬಿಟ್ಟ ಕಣ್ಣಲಿ ವೈರಿ ನೋಡಿ ಕೊಂದ
ಮೋರೆ ಮುದುರಿಕೊಂಡಿಹುದೇನು ಚಂದ
ದಾಡೇಲಿ ದೂಡಿ ತಂದ
ಕಂಬವನೊಡೆದು ಪೊಡವಿಲಿ ಮೂಡೇನೆಂದ
ಶುಕ್ರಗೆ ಕಣ್ಣು ಮಾಡಿದನೊಂದ
ಕೋಡಗಗಳ ಕೂಡಿ ವನಕ್ಕೆ ಕೇಡು ತಂದ
ಹಾಲ್ಮೊಸರ ಮೀಸಲು ಮುರಿದು ತಿಂದ
ಬತ್ತಲೆ ನಿಂದು ಹತ್ತುವೆ ಕುದುರೆ ಎಂದ
ಭರದಿ ಕಾಗಿನೆಲೆಯಾದಿಕೇಶವನೆಂದ ||3||
Thoughts & Reflections
0No reflections shared yet. Be the first to share your thoughts!