← Back to home
ಬೊಂಬೆಯಾಟವನಾಡಿಸಿದೆ ಮಹಾಭಾರತದ
Author: ಕನಕದಾಸCategory: ಶ್ರೀಕೃಷ್ಣRaaga: ಮುಖಾರಿTaala: ಝಂಪೆತಾಳ
ॐ
ಬೊಂಬೆಯಾಟವನಾಡಿಸಿದೆ ಮಹಾಭಾರತದ ||ಪ||
ಅಂಬುಜಭವಾದಿ ಅಮರರು ನೋಡುತಿರಲು ||ಅ||
ಕುರುಭೂಮಿಯೆಂಬ ಪುರವೀಧಿಯನು ರಚಿಸಿ
ಮರೆಯ ಮಾಯದ ಐದು ತೆರೆಯ ಹಾಕಿ
ಧರಣೀಶರೆಂಬ ನರಪ್ರತಿಮೆಗಳನಳವಡಿಸಿ
ನರನ ರಥವಾಜಿಯ ಸೂತ್ರವನು ಪಿಡಿದು ||1||
ಓದುವನು ನಾರದನು ವಾದ್ಯಕಾರನೆ ಶಂಭು
ಬಾದರಾಯಣದೇವ ಕಥಾಪ್ರಸಂಗಿ
ಮೇದಿನಿಯ ಹೊರೆಗಳೆವ ಮೃತ್ಯುವಿನ ಹಾಸ್ಯರಸ
ವೇದನಿಕರಗಳು ಕೈವಾರಿಸುತಿರಲು ||2||
ಹದಿನೆಂಟು ಅಕ್ಷೋಹಿಣಿ ಮಾರ್ಬಲವ ನೆರೆಸಿ
ಹದಿನೆಂಟು ದಿನ ಕದನಕೇಳಿಕೆ ನಡೆಸಿ
ಅದರೊಳ್ಳೆಯವರನುಳುಹಿ ಅವನಿಭಾರವನಿಳುಹಿ
ಮುದದಿ ಬ್ರಹ್ಮಕಪಾಲವನು ತೃಪ್ತಿಗೊಳಿಸಿ ||3||
ಲೋಕದೊಳಗೈದನೆಯ ವೇದವಿದೆಂದೆನಿಸಿ
ಪಾಕಶಾಸನ ಸಭೆಯನು ಮೆಚ್ಚಿಸಿ
ಈ ಕಥೆಯ ಕೇಳಿದ ಜನಮೇಜಯನ ಪತಿಕರಿಸಿ
ತಾ ಕಪಟನಾಟಕದ ಸೂತ್ರಧಾರನೆನಿಸಿ ||4||
ಇಂತೆಸೆವ ಲೀಲಾವಿನೋದ ರಚನೆಗಳಿಂದ ಲೋ
ಕಾಂತರಂಗಳ ಸಂಚರಿಸುತ
ಸಂತಸದಿ ಭರತ ಸಂಸಾರವನು ಪೊರೆವ ವೇ
ದಾಂತನುತ ಕಾಗಿನೆಲೆಯಾದಿಕೇಶವರಾಯ ||5||
Thoughts & Reflections
0No reflections shared yet. Be the first to share your thoughts!