← Back to home
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
Author: ಕನಕದಾಸCategory: ಶ್ರೀಕೃಷ್ಣRaaga: ಪೂರ್ವೀTaala: ರೂಪಕತಾಳ
ॐ
ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ ||ಪ||
ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ
ಮಾನ ಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ
ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ ||1||
ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ
ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ
ನೀತಿಯರಿತು ನಡೆಯದಿರುವ ಬಂಟನ್ಯಾತಕೆ
ಸೋತ ಹೆಣ್ಣಿಗೆ ಓತು ನಡೆಯದ ಪುರುಷನ್ಯಾತಕೆ ||2||
ಸನ್ನೆಯರಿತು ನಡೆಯದಿರುವ ಸತಿಯು ಯಾತಕೆ
ಮನ್ನಣಿಂದೆ ನಡೆಸದಿರುವ ದೊರೆಯು ಯಾತಕೆ
ಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆ
ಚೆನ್ನ ಆದಿಕೇಶವನಲ್ಲದ ದೈವವ್ಯಾತಕೆ ||3||
Thoughts & Reflections
0No reflections shared yet. Be the first to share your thoughts!